ಯಕ್ಷಕಾಶಿ ಗುಂಡಬಾಳದ ಮುಖ್ಯಪ್ರಾಣ ಸನ್ನಿಧಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜನವರಿ 9 , 2014
|
ಯಕ್ಷಗಾನದ ಪರಂಪರಾಗತ ಪಾಠಶಾಲೆ ಎಂದು ಪ್ರಸಿದ್ಧವಾದ, ಯಕ್ಷಕಾಶಿ ಎಂದು ಕಲಾವಿದರು, ಕಲಾಪ್ರೇಮಿಗಳು ಗೌರವದಿಂದ ಕರೆಯುವ ಗುಂಡಬಾಳದ ಮುಖ್ಯಪ್ರಾಣ ಶ್ರೀ ಲಕ್ಷ್ಮಿ ವೆಂಕಟೇಶ ದೇವರ ಸಮ್ಮುಖದಲ್ಲಿ ದೇವರಿಗೆ ಅತ್ಯಂತ ಪ್ರಿಯವಾದ ಯಕ್ಷಗಾನ ಇಂದಿನಿಂದ ಆರು ತಿಂಗಳುಗಳ ಕಾಲ ನಿತ್ಯ ನಡೆಯಲಿದೆ.
ಈ ಸನ್ನಿಧಿಯಲ್ಲಿ ಕಲಾವಿದರಾಗಿ ಆಟ ಕುಣಿಯುವುದು, ಸೇವಾದಾರನಾಗಿ ಆಟ ಆಡಿಸುವುದು, ಪ್ರೇಕ್ಷಕನಾಗಿ ಆಟ ನೋಡುವುದು ಸಹ ಸೇವೆಯೇ ಆಗಿದೆ. ಬಡ ಬಡಗುತಿಟ್ಟಿನ ಯಕ್ಷಗಾನದ ದಂತಕಥೆಯಾಗಿರುವ ಕೆರೆಮನೆ ಶಿವರಾಮ ಹೆಗಡೆ ಮತ್ತು ಆ ಕುಟುಂಬದ ಎಲ್ಲ ಕಲಾವಿದರು, ಪದ್ಮಶ್ರೀ ಚಿಟ್ಟಾಣಿ ಕುಟುಂಬದ ಕಲಾವಿದರು, ಜಲವಳ್ಳಿ, ಕೊಂಡದಕುಳಿ, ಗುಂಡಿಬೈಲು, ಕಪ್ಪೆಕೆರೆ, ಕರ್ಕಿ ಭಂಡಾರಿ ಸಹೋದರರ ಸಹಿತ ಮೂರು ತಲೆಮಾರುಗಳ ಎಲ್ಲ ಕಲಾವಿದರು ಇಲ್ಲಿ ಮೇಳಕಟ್ಟಿ ತಿಂಗಳುಗಟ್ಟಲೆ ಆಟ ಪ್ರದರ್ಶಿಸಿದ್ದಾರೆ. ಹಾಸ್ಯಗಾರ ಕುಟುಂಬ ಸಹಿತ ಜಿಲ್ಲೆಯ ಹಾಗೂ ನೆರೆಜಿಲ್ಲೆಯ ಬಹುಪಾಲು ಕಲಾವಿದರು ಇಲ್ಲಿ ಸೇವೆ ಸಲ್ಲಿಸಿದ್ದಾರೆ.
|
ಹೀಗಿತ್ತು ಪುರಾತನ ಗು೦ಡಬಾಳದ ರ೦ಗಮ೦ದಿರ
( ಚಿತ್ರ ಕೃಪೆ : www.kamat.com )
|
ಯಕ್ಷಗಾನದಲ್ಲಿ ಆಸಕ್ತಿಯುಳ್ಳ ಬಾಲಕರು ಗೋಪಾಲ ವೇಷದಿಂದ ಆರಂಭಿಸಿ ಗುಂಡಬಾಳದಿಂದಲೇ ಯಕ್ಷಗಾನ ಕಲಿತು ದೊಡ್ಡ ಕಲಾವಿದರಾಗಿದ್ದಾರೆ. ದೇವರೆದುರು ಕುಣಿಯುವಾಗ ಭಯ, ಭಕ್ತಿ ಜೊತೆಯಲ್ಲಿ ಕೆಲ ದಿನ ದೊಡ್ಡ ಪಾತ್ರಗಳು ಸಿಗುವುದರಿಂದ ಪವಿತ್ರವಾದ ಈ ವೇದಿಕೆ ಯಕ್ಷಗಾನದ ಪಾಠಶಾಲೆಯಾಗಿ ಶತಮಾನಗಳಿಂದ ಯಕ್ಷಗಾನಕ್ಕೆ ದೊಡ್ಡ ಕೊಡುಗೆ ನೀಡಿದೆ.
ಮುಖ್ಯಪ್ರಾಣನಿಗೆ ಯಕ್ಷಗಾನ ಪ್ರೀತಿಯಾಗಿರುವುದರಿಂದ ಪ್ರತಿವರ್ಷ ಆಟ ಆಡಿಸುವ 12 ಜನ ಇದ್ದಾರೆ. ಸೇವೆಗೆ ಅವಕಾಶ ಸಿಗಬೇಕಾದರೆ 4 ವರ್ಷ ಕಾಯಬೇಕು. ಈ ವರ್ಷ 150ಕ್ಕೂ ಹೆಚ್ಚು ಆಟಗಳು ನಿಗದಿಯಾಗಿವೆ. ಪ್ರಭಾಕರ ಚಿಟ್ಟಾಣಿ ನೇತೃತ್ವದಲ್ಲಿ ಈ ವರ್ಷ ಆಟ ನಡೆಯಲಿದೆ. ಆಗಾಗ ದೊಡ್ಡ ಕಲಾವಿದರು ಇಲ್ಲಿ ಸೇವೆ ಆಟದಲ್ಲಿ ಪಾಲ್ಗೊಳ್ಳುತ್ತಾರೆ. ಆಟ ನೋಡಲು ಬಂದವರು ರಂಗಸ್ಥಳದ ಧೂಳಿಯ ತಿಲಕ ಇಟ್ಟುಕೊಂಡು ಬರುತ್ತಾರೆ.
ಕಾಡಿನ ಮಧ್ಯೆ ಇರುವ ಗುಂಡಬಾಳಾಕ್ಕೆ ಒಂದಾನೊಂದು ಕಾಲದಲ್ಲಿ ರಸ್ತೆ ಇರಲಿಲ್ಲ. ಗುಂಡಬಾಳದತ್ತ ಮುಖ ಮಾಡಿ ರಾತ್ರಿ ಸೂಡಿ ಹಿಡಿದು ಹೊರಟರೆ ದೇವರು ಆಟಕ್ಕೆ ಕರೆಸಿಕೊಳ್ಳುತ್ತಾನೆ ಎಂಬ ನಂಬುಗೆ ಸತ್ಯವಾಗಿತ್ತು. ಆ ಕಾಲದಲ್ಲಿ ಬಡತನದಿಂದ ಬಳಲುತ್ತಿದ್ದರೂ ಹಳ್ಳಿಯ ಜನ ಆಟ ನೋಡುವುದನ್ನು ಬಿಡುತ್ತಿರಲಿಲ್ಲ. ಹಲಸಿನ ಬೀಜವನ್ನು, ತಾಳೆ ಮರದ ಹಿಟ್ಟನ್ನು ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ಗುಂಡಬಾಳಕ್ಕೆ ಹೋಗಿ ರಾತ್ರಿ ಆಟ ನೋಡಿ ಹಗಲು ಪಕ್ಕದಲ್ಲಿರುವ ಹೊಳೆಯ ಬದಿ ಹಲಸಿನ ಬೀಜ ತಾಳೆಮರದ ಹಿಟ್ಟಿನ ಗಂಜಿ ಮಾಡಿ ಊಟ ಮಾಡಿ ನಿದ್ರೆ ಮಾಡಿ ರಾತ್ರಿ ಪುನಃ ಆಟ ನೋಡುತ್ತ ನಾಲ್ಕಾರು ದಿನ ಉಳಿದು ಬರುತ್ತಿದ್ದರಂತೆ. ಬೆಳಗಿನಜಾವ ಕಾಡಿಗೆ ಹೋಗಿ ಸಪ್ಪು, ಉರುವಲು ತರುವವರು ರಾತ್ರಿ ಊಟವಾದ ಮೇಲೆ ಗುಂಡಬಾಳಕ್ಕೆ ಹೋಗಿ ಬೆಳಗಿನಜಾವದ ತನಕ ಆಟ ನೋಡಿ ಮತ್ತೆ ಕಾಡಿಗೆ ಹೋಗುತ್ತಿದ್ದರು.
|
ಯಕ್ಷಗಾನ ಸೇವೆ
|
ದೇವಾಲಯದ ಎದುರಿಗಿರುವ ಗದ್ದೆಯಲ್ಲಿ ನಾಲ್ಕು ಕಂಬ ನೆಟ್ಟು ಚಪ್ಪರ ಹಾಕಿದರೆ ರಂಗಸ್ಥಳ ಸಿದ್ಧವಾಗುತ್ತಿತ್ತು. ದೊಂದಿ ಬೆಳಕಿನಲ್ಲಿ ನಂತರ ಗ್ಯಾಸ್ಲೈಟ್ನಲ್ಲಿ ಈಗ ವಿದ್ಯುತ್ ದೀಪದ ಬೆಳಕಿನಲ್ಲಿ ಆಧುನಿಕ ರಂಗಸ್ಥಳದಲ್ಲಿ ಆಟ ನಡೆಯುತ್ತದೆ. ಅದೆಷ್ಟು ಶತಮಾನ ಕಳೆಯಿತೋ ಗೊತ್ತಿಲ್ಲ, ಗುಂಡಬಾಳದಲ್ಲಿ ಆಟ ನಡೆಯುತ್ತಲೇ ಬಂದಿದೆ.
ಪುರಾತನ ಕಾಲದ ಕಾಷ್ಟಗಣಪತಿಗೆ ಚೌಕಿಯಲ್ಲಿ ಮತ್ತು ರಂಗಸ್ಥಳದಲ್ಲಿ ರಾತ್ರಿ 9ಕ್ಕೆ ಪೂಜೆ ಮಾಡಿ ಆಟ ಆರಂಭವಾಗುತ್ತದೆ. ಮುಖ್ಯಪ್ರಾಣ ಒಂದಿಷ್ಟು ವೇಳೆ ಆಟ ನೋಡಿದ ಮೇಲೆ 10:30 ರ ಸುಮಾರು ಮಂಗಳಾರತಿಯಾಗುತ್ತದೆ. ಈ ಆರು ತಿಂಗಳ ಅವಧಿಯಲ್ಲಿ ದೇವಾಲಯ ಮತ್ತು ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಹಬ್ಬಸ್ಸಿ ಮತ್ತು ವೀರಬಧ್ರ ವೇಷಗಳ ಪ್ರವೇಶವಿದೆ. ಆರು ಜನ ಧರ್ಮದರ್ಶಿಗಳ ಆಡಳಿತ ಮಂಡಳಿ ದೇವಾಲಯದ ವ್ಯವಸ್ಥೆಯನ್ನು ಮತ್ತು ಯಕ್ಷಗಾನ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದೆ.
ದೇವಾಲಯದ ವಿಳಾಸ :
ಗು೦ಡಬಾಳ, ಮುಟ್ಟ ಅ೦ಚೆ
ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ದೂರವಾಣಿ : +91 08387256041
e-mail : mukhyapranatemple@gmail.com
website : http://shreemukyapranagundabala.webnode.com
*****************************
|
ಗು೦ಡಬಾಳದ ಶ್ರೀ ಮುಖ್ಯಪ್ರಾಣ ಲಕ್ಷ್ಮಿ ವೆಂಕಟೇಶ ದೇವಾಲಯ
|
|
ಇ೦ದಿನ ಗು೦ಡಬಾಳದ ರ೦ಗಮ೦ದಿರ
|
ಕೃಪೆ :
http://www.kannada.yahoo.com
|
|
|